Wednesday, December 4, 2019

ಏಕೀ ಆಲಸ್ಯವು ಆತನಿಗೆ ದೇವಿ

ಏಕೀ ಆಲಸ್ಯವು ಆತನಿಗೆ ದೇವಿ
ಭಕುತರೇ ಮೇಲೇರಿ ಮುಂದೆ ಹೋಗುತಿಹರು

ಕಣ್ತೆರೆದು ನೋಡೆನ್ನು ಪಾಲಾಕ್ಷನಿಗೆ ಗೌರಿ
ಬೇಡ ತನ್ನ್ ಎರಡೂ ಕಂಗಳನು ನೀಡಿಹನು
ಎಕೀ ಆಲಸ್ಯವು...

ಬೆರಳೆತ್ತಿದ ಗಿರಿಧಾರಿಗೆ ಹೇಳಮ್ಮ ಲಕುಮಿ
ತಂದೆ ವಸುದೇವನ ತೋಳ್ಬಲವ ಗಮನಿಸಲು
ಎಕೀ ಆಲಸ್ಯವು...


ಗೀತೆಯೊಂದನು ಸಾರಿ ಮೆರೆವಾತ ಕೇಶವಗೆ
ನೂರಾರು ಗೀತೆಗಳನು ರಚಿಸಿಹರು ದಾಸರು
ಎಕೀ ಆಲಸ್ಯವು...


ಏನದು ಅಭಯ ಹಸ್ತ ತೋರುವಾತ ನಮಗೆ
ಇಗೋ ಉಭಯಹಸ್ತದಿಂ ಕರ್ಮಯೋಗಿ ನಮಿಸುವನು
ಎಕೀ ಆಲಸ್ಯವು...

Wednesday, August 28, 2019

ಕೋಟೆ ಮಾರಮ್ಮ ಪಾಲಯಮಾಂ - ಜಂಬೂರು ಕೋಟೆ ಮಾರಮ್ಮನಿಗೆ ಗೀತಾರ್ಪಣೆ


ಶ್ರೀ ಕೋಟೆ ಮಾರಾಮ್ಮ ಪಾಲಯಮಾಂ
ತ್ರಿಮಾತೃಕ ಸಹೋದರಿ... ಅಮ್ಮಾ...
ಶ್ರೀ ಕೋಟೆ ಮಾರಮ್ಮ ಪಾಲಯಮಾಂ

ಗಂಗಮತಸ್ತ ಆರಾಧ್ಯ ದೇವತೆ (೨)
ಚತುರ್ವರ್ಣಾಲಂಕೃತೆ... ಶೀತಲೇ...

ಸರೋವರತಟಾಕ ವಾಸಿನಿ (ಅಮ್ಮ) (೨)
ಸುವರ್ಷ ಸಂಪತ್ತ್ ಪ್ರದಾಯಿನಿ... ಸುನಯನೀ...

ಚಂಪಕ ಪುಷ್ಪ ಸುಪೂಜಿತೆ (೨)
ಜಂಬೂರು ಗ್ರಾಮಸ್ಥಿತೆ...
ಕರ್ಮಯೋಗಿ ಸುಪ್ರೀತೇ
ಸದಾ ನಮಸ್ತೆ....

ಪಾಪಿಗಳ ಸೌಭಾಗ್ಯ - ಹರಿಭಜನೆ



ಏನು ಹಾಡಲಿ ಪಾಪಿಗಳ ಸೌಭಾಗ್ಯ, ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು (೨)

ಪುಣ್ಯವಂತನಾದ ಸುಧಾಮನು ನಿನ್ನ್ ಮನೆಗೆ ನಡೆದು ಬಂದನು (೨)
ನೀ ಲಂಕೆಯವರೆಗೆ ನಡೆದು ಹೋದ ರಾವಣನ ಸೌಭಾಗ್ಯ ಏನು ಹೇಳಲಿ?

ಪುಣ್ಯವಂತಳಾದ ಯಶೋಧೆಯು ನಿನ್ನನ್ನು ಮಡಿಲಲ್ಲಿ ಮುದ್ದಾಡಿದಳು (೨)
ನೀನೆ ಎತ್ತಿ ಮಡಿಲಲ್ಲಿ ಮಲಗಿಸಿಕೊಂಡ ಹಿರಣ್ಯನ ಸೌಭಾಗ್ಯ ಏನು ಹೇಳಲಿ?

ಪುಣ್ಯವಂತನಾದ ಪಾರ್ಥನು ವಿಶ್ವರೂಪವನ್ನು ರಣರಂಗದಲಿ ಕಂಡ (೨)
ಸಭೆಯೊಳಗೇ ಅದನು ಕಂಡ ಕೌರವೇಶ್ವರನ ಸೌಭಾಗ್ಯ ಏನು ಹೇಳಲಿ?

(೪)
ಪುಣ್ಯವಂತರಾದ ಭಕ್ತರಿಗೆ ಮೋಕ್ಷವನ್ ನೀ ಅನುಗ್ರಹಿಸುವೆ (೨)
ಕಾಯಕದಲಿ ಕೈಲಾಸ ಕಾಣುವ ಕರ್ಮಯೋಗಿಯ ಸೌಭಾಗ್ಯ ಏನು ಹೇಳಲಿ

Edited to fit Roopaka taala (ರೂಪಕ ತಾಳಕ್ಕೆ ಅನುಬದ್ಧವಾದ ಸಾಹಿತ್ಯ)
ಏನು ಹೇಳಲಿ ನಾನು ಪಾಪಿಗಳ ಸೌಭಾಗ್ಯ 
ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು 

ಪುಣ್ಯಾತ್ಮ ಸುಧಾಮ
ತಾನೇ ನಡೆದು ಬಂದ
ನೀನೇ ನಡೆದು ಹೋದ 
ಲಂಕೇಶ್ವರನೇ ಧನ್ಯ 

ಪುಣ್ಯ ಮಾತೆ ಯಶೋದೆ 
ನಿನ್ನ ಮಡಿಲಲ್ಲೆತ್ತಿದಳು 
ನಿನ್ನ ಮಡಿಲಲಿ ಮಲುಗಿದ   
ಆ ಹಿರಣ್ಯನೇ ಬಹು ಧನ್ಯ

ಪಾರ್ಥನಿಗೆ  ರಣದಲ್ಲಿ 
ದಿವ್ಯದರ್ಶನವಾಯ್ತು 
ಸಭೆಯೊಳಗೆ ಅದ ಕಂಡ
ಕೌರವೇಶ್ವರನೇ ಧನ್ಯ 

ಪುಣ್ಯವಂತರಿಗೆ ನೀನು 
ಮೋಕ್ಷವನು ನೀಡುವೆಯೋ  
ಕಾಯಕವನೇ ಪೂಜಿಸುವ  
ಕರ್ಮಯೋಗಿಗಳೇ ಧನ್ಯ

Saturday, December 15, 2018

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು - ಜೀವಮೌಲ್ಯವನ್ನು ಕುರಿತು ಬರೆದ ಗೀತೆ

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು
ಹಾಯಾದ ಅಡ್ಡಹಾದಿಯ ಹಿಡಿಯದಿರು 
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

1...............
ಕೊಟ್ಟ ಕೆಲಸದ ಸೂಕ್ಷ್ಮತೆಯ ಆಳವನಳಿ
ಸಿಕ್ಕ ಹೊಣೆಯ ಮೇರೆತ್ತರವನೇರು
ನಡುತರೆಯ ಕೆಸರಿನಲಿ ಮುಳುಗಾಡದಿರು

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

2...............
ನಿನ್ನನುಭವಗಳ ಬೇರು ಮುನ್ನುಗ್ಗಿ ಹರಡಲಿ
ನಿನ್ನರಿವಿನರೆಂಬೆಗಳ್ ಹಿಗ್ಗಿ ಚಾಚಲಿ
ಸುಖಾಲಸ್ಯದ್ ಹೊಂಡದಲಿ ಮಂಡೂಕವಾಗದಿರು

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

3.................
ಎಡಗಡೆಯ ನೋಟವನು ಕಡೆಗಣಿಸದಿರು
ಬಲಬದಿಯ ಅಭಿಮತವ ಎಸೆದಾಡದಿರು
ಅಸಹನೆಯ ಕತ್ತಲೊಳು ಜಡವಾಗದಿರು

ಕರ್ಮಯೋಗಿಯಾಗು, ಕರ್ಮಯೋಗಿಯಾಗು, ಕರ್ಮಯೋಗಿಯಾಗು
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

ಅಣ್ಣ ನಾನು ತೊಡಗಿದಾಗ - ಗಣಪತಿಗೆ ಪ್ರಾರ್ಥನೆ

ಅಣ್ಣ ನಾನು ತೊಡಗಿದಾಗ
ನೀನು ಪ್ರಾರಾಂಭಿಸು
ನಾನು ಬಲಗಾಲೆತ್ತಿದಾಗ
ಎಡವ ನೀ ಅವಲಂಬಿಸು 

1...
ನಾನು ಜೀವಕೆ ಜನ್ಮ ಕೊಟ್ಟೆ
ನೀನು ಜನ್ಮವ ಚೇತರಿಸು
ನಾನು ಬಲಗಾಲೆತ್ತಿದಾಗ
ಎಡವ ನೀ ಅವಲಂಬಿಸು 

2...
ಅಣ್ಣ ನೀನು ತಮ್ಮನೊಂದಿಗೆ
ಮನದೊಳಗೆ ದಯಮಾಡಿಸು
ನೀವಿಬ್ಬರು ಜೊತೆಯಲ್ಲಿದ್ದರೆ
ಎಲ್ಲರಿಗು ಸಂತಸು

3...
ಆದಿ ನೀನಾಗಿರುವೆ ಅಣ್ಣ
ಆತನು ಅನಂತನೂ
ಕರ್ಮಯೋಗಿಯ ಗೀತೆಗಳಲ್ಲಿ
ಭಕ್ತಿ ಭಾವನೆ ಸ್ಫೂರ್ತಿಸು

ಕ್ಷೇತ್ರಕ್ಕೆ ಬರಬೇಡಿರಯ್ಯ - ತೀರ್ಥಕ್ಷೇತ್ರಗಳಲ್ಲಿ ಹರಕೆ ಹೊತ್ತುವ ಪದ್ಧತಿಯ ಕುರಿತು ಗೀತೆ

ಕ್ಷೇತ್ರಕ್ಕೆ ಬರಬೇಡಿರಯ್ಯ
ಸ್ವಾಮಿಯೊಡನೆ ವ್ಯವಹಾರವಿದ್ದರೆ
ಕ್ಷೇತ್ರಕ್ಕೆ ಬರಬೇಡಿರಯ್ಯ
ಮರವೇ ಬರಡಾದಾಗ
ಕುಕ್ಕೆ ಇದ್ದರೂ ಫಲವೇನು?

1...
ಕೆರೆಯ ನೀರನ್ನೇ ಕೆರೆಗೆ ಚೆಲ್ಲಿ
ಸಾಧಿಸಿದ್ದಾದರೂ ಎನು?
ಹರಕೆ ಹೊತ್ತು ಕರವ ಮುಗಿದು
ಸ್ವಾಮಿಗೆ ನೀನು ಕೊಟ್ಟಿದ್ದೇನು?

2...
ಹೋಮ ಯಾಗ ಪೂಜೆ ಭಜನೆ
ನಾಮ ಸ್ಮರಣ ಅರ್ಚನೆ
ಇವೆಲ್ಲ ಧರ್ಮವೆಂದು
ತಿಳಿದು ಅರಿತಿದ್ದೇನು?

3...
ಅರ್ಹ ಯೋಗ್ಯ ನಾನು ಎಂದು
ಏಕೆ ನಿನಗೆ ಭ್ರಾಂತಿಯು
ಕರ್ಮಯೋಗಿಯ ಮಾತುಕೇಳು
ಕರ್ಮಕ್ಕಿಂತ ಮಿಗಿಲೇನು?